ವಿದ್ಯಾನಿಧಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ
ವಾಣಿಜ್ಯ ವಿಭಾಗದ ಪೂರ್ವಿ ಮತ್ತು ರೋಹನ್ ರಾಜ್ಯಕ್ಕೆ 3 ನೇ ರ್ಯಾಂಕ್
ವಿಜ್ಞಾನ ವಿಭಾಗದ ಗಿರಿಜಾ ರಾಜ್ಯಕ್ಕೆ 7ನೇ ರ್ಯಾಂಕ್
ವಿಜ್ಞಾನ – ವಾಣಿಜ್ಯಗಳೆರಡರಲ್ಲೂ ಪ್ರಥಮ ವಿದ್ಯಾನಿಧಿ
ವಿದ್ಯಾನಿಧಿ ಕಾಲೇಜಿನ ರೋಹನ್ ಮತ್ತು ಪೂರ್ವಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 597 ಅಂಕಗಳನ್ನು ಗಳಿಸುವುದರೊಂದಿಗೆ 2025-26 ನೇ ಸಾಲಿನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಗಿರಿಜಾ 593 ಅಂಕಗಳೊಂದಿಗೆ ರಾಜ್ಯಕ್ಕೆ ಏಳನೇ ರ್ಯಾಂಕ್ ಪಡೆದಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ರಾಜ್ಯಮಟ್ಟದಲ್ಲಿ ರ್ಯಾಂಕುಗಳನ್ನು ಗಳಿಸುತ್ತಾ ಬಂದ ಕಾಲೇಜಿನ ದಣಿವರಿಯದ ಪರಿಶ್ರಮಕ್ಕೆ ಈ ಬಾರಿಯೂ ರ್ಯಾಂಕ್ ದೊರೆತಿರುವುದು ಹೆಮ್ಮೆಯ ಸಂಗತಿ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 696 ಮಂದಿ ಅತ್ಯುನ್ನತ ಶ್ರೇಣಿ 456 ಮಂದಿ ಪ್ರಥಮ ಶ್ರೇಣಿ ಮತ್ತು 26 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಯಶವಂತ್ (591), ರಚನಾ ಎಸ್, (591), ಹರ್ಷನ್ ಗೌಡ (589), ವರ್ಷಾ ಇ. (589), ನಿಹಾರಿಕಾ ಎ. (588), ಎಸ್. ಯಶಸ್ (588), ವರ್ಷಿಣಿ ಸಿ.ಆರ್ (587), ರೋಹಿತ್ ವೈ.ಜಿ (587), ಕೀರ್ತಿ ಎ. (587) ಮತ್ತು ವಾಣಿಜ್ಯ ವಿಭಾಗದಲ್ಲಿ ನಂದಶ್ರೀ (596), ಎಂ.ಎಸ್. ತೇಜಸ್ವಿನಿ (595), ಸಂಜನಾ ಎಲ್ (595), ಪ್ರಕೃತಿ ಎಸ್. (594), ಗೌತಮಿ ಬಿ.ಎಲ್. (593), ಹರ್ಷಿತಾ ಎಸ್. (593), ಮಮತಾ ಸಿ. (593), ಸಿಂಚನಾ ಎಚ್ (593), ಪುಣ್ಯಶ್ರೀ ಎಂ.ಪಿ. (592), ಶ್ರೇಯಾ (592), ಸೃಷ್ಟಿ ಪಿ. ಕುಂದಗೋಳ್ (592), ಇಂಚರಾ ಎಚ್. ಆರ್. (591), ರಿತಿಶಾ ಟಿ.ಕೆ. (591), ಹರ್ಷಿತಾ ಕೆ.ಕೆ.(590), ಕೃತಿಕಾ ಎಂ.ಎ.(590) ಕುಸುಮ ಬಿ.(590) ಮಹೇಶ್ ಎಂ. ಬಡಿಗೇರ್(590) ಸಿಂಧು (590) ಅಂಕಗಳನ್ನು ಗಳಿಸುವುದರೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾನಿಧಿಯ ಎಲ್ಲ ಸಾಧಕ ವಿದ್ಯಾರ್ಥಿಗಳನ್ನು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ಜಯಣ್ಣ ಮತ್ತು ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಅಭಿನಂದಿಸಿದರು. ಪ್ರಾಂಶುಪಾಲರು ಉಪಸ್ಥಿತರಿದ್ದರು.
ನಾಲ್ಕು ದಶಕಗಳಿಂಲೂ ಶಿಕ್ಷಣಕ್ಷೇತ್ರದಲ್ಲಿ ತೊಡಗಿಸಿಕೊಂಡ ನಮ್ಮ ಸಂಸ್ಥೆಯು ನಿರಂತರವಾಗಿ ರಾಜ್ಯಮಟ್ಟದ ರ್ಯಾಂಕುಗಳನ್ನು ಪಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಉತ್ಕೃಷ್ಟವಾದ ಬೋಧನೆ, ಸುವ್ಯವಸ್ಥಿತ ಕಲಿಕಾ ವಾತಾವರಣ ಮತ್ತು ಶ್ರದ್ಧಾವಂತ ಮಕ್ಕಳು ಇದ್ದಲ್ಲಿ ಮಾತ್ರ ಈ ಬಗೆಯ ಸಾಧನೆ ಸಾಧ್ಯ. ಸಂಸ್ಥೆ ಒದಗಿಸಿದ ಎಲ್ಲ ಸೌಕರ್ಯಗಳನ್ನು ವಿದ್ಯಾರ್ಥಿಗಳು ಉತ್ತಮವಾಗಿ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳ, ಉಪನ್ಯಾಸಕರ, ಪೋಷಕರ ಶ್ರಮ ಅಭಿನಂದನೀಯ ಎಂದು ಕೆ.ಬಿ.ಜಯಣ್ಣ ಸಾಧಕರನ್ನು ಶ್ಲಾಘಿಸಿದರು.
ಉತ್ತಮ ಫಲಿತಾಂಶ ಬಂದಿರುವುದು ಅತ್ಯಂತ ಸಂತೋಷದ ಸಂಗತಿ. ವಿದ್ಯಾರ್ಥಿಗಳು ಬಹಳ ಚೆನ್ನಾಗಿ ಸಿದ್ಧತೆ ನಡೆಸಿದ್ದಾರೆ. ಯಾವತ್ತೂ ಅವರ ನಿರಂತರ ಪರಿಶ್ರಮ ಅಭಿನಂದನಾರ್ಹ. ಯಶಸ್ಸು ಅನ್ನುವುದು ಒಂದೆರಡು ದಿನಗಳ ಕನಸು ಅಥವಾ ಸಾಧನೆಯಲ್ಲ. ಅದು ಪ್ರತಿದಿನದ ಪ್ರಯತ್ನದ ಫಲ. ಫಲಿತಾಂಶ ಏನೇ ಬಂದರೂ ನಾವು ಸಂಭ್ರಮಿಸೋಣ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದೆ. ಮುಂದೆ ಅನೇಕ ಸಾಧನೆಗಳಿಗೆ ಇಂದಿನ ಈ ಸಂಭ್ರಮ ಸ್ಪೂರ್ತಿದಾಯಕವಾಗಲಿ ಎಂದು ಎನ್. ಬಿ. ಪ್ರದೀಪ್ ಕುಮಾರ್ ಶುಭ ಹಾರೈಸಿದರು.
ಕಾಲೇಜಿನಲ್ಲಿ ನಮಗೆ ಅಧ್ಯಯನಕ್ಕೆ ಬೇಕಾದ ಉತ್ತೇಜಕ ವಾತಾವರಣವಿದೆ. ಉಪನ್ಯಾಸಕವೃಂದದವರ ನಿರಂತರ ಮಾರ್ಗದರ್ಶನ, ಹೆತ್ತವರ ಬೆಂಬಲ ಸದಾ ನಮ್ಮ ಪಾಲಿಗಿತ್ತು. ಅಲ್ಲದೇ ಉನ್ನತವಾದುದನ್ನು ಸಾಧಿಸಲೇಬೇಕೆಂಬ ಛಲ ನಮ್ಮಲ್ಲಿ ಸದಾ ಜಾಗೃತವಾಗಿತ್ತು. ಮೊದಲನೇ ರ್ಯಾಂಕ್ ನಿರೀಕ್ಷಿಸಿದ್ದೆ. ಆದರೂ ರಾಜ್ಯಕ್ಕೆ 3ನೇ ರ್ಯಾಂಕ್ ಬಂದಿರುವುದು ನನಗೆ ಸಂಭ್ರಮದ ಸಂಗತಿ ಎಂದು ರೋಹನ್ ಹೇಳಿದರು.
ಪ್ರತೀ ವಿಷಯವನ್ನೂ ಅಂದಂದೇ ಓದಿಕೊಳ್ಳುತ್ತಿದ್ದೆ, ಸಾಕಷ್ಟು ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಿದೆ. ಈ ಬಗೆಯ ಸಿದ್ಧತೆ ನನಗೆ ಅನುಕೂಲವಾಯಿತು. ಸಿದ್ಧತಾ ಪರೀಕ್ಷೆಗಳನ್ನು ನಿರಂತರವಾಗಿ ಬರೆಯುವಾಗ ದಣಿವೆನಿಸಿದರೂ ಈ ಸಂತೋಷದಲ್ಲಿ ಅದೆಲ್ಲ ಗೌಣವಾಗಿದೆ. ಸಾಮಾಜಿಕ ತಾಣಗಳಿಂದ ನಾನು ದೂರವೇ ಇದ್ದೇನೆ. ನಮ್ಮಲ್ಲಿ ಏಕಾಗ್ರತೆಯಿದ್ದು ಸಮರ್ಪಕ ಅಧ್ಯಯನವಿದ್ದರೆ ಮಾತ್ರ ಹೆಚ್ಚು ಅಂಕಗಳನ್ನು ಗಳಿಸಬಹುದು ಎಂದು ರ್ಯಾಂಕ್ ವಿಜೇತೆ ಗಿರಿಜಾ ತಮ್ಮ ಅನುಭವವನ್ನು ಹಂಚಿಕೊಂಡರು.
ನಮ್ಮ ವಿದ್ಯಾನಿಧಿ ನಮ್ಮ ಹೆಮ್ಮೆ ಎಂದು ಸದಾ ನಂಬಿದ್ದೆವು. ಇಲ್ಲಿ ಕಲಿತಿರುವುದಕ್ಕೆ ನಮಗೆ ಸಂತೋಷವಿದೆ. ಇಲ್ಲಿಯ ಕಲಿಕಾಪೂರಕ ವಾತಾವರಣ ನಮಗೆ ಅತ್ಯಂತ ಉಲ್ಲಾಸದಾಯಕವಾಗಿತ್ತು. ಶಿಸ್ತುಬದ್ಧ ಬೋಧನೆ, ತರಗತಿಯ ಸುವ್ಯವಸ್ಥೆ ನಮ್ಮನ್ನು ಸದಾ ಓದಿನೆಡೆಗೆ ಗಮನಹರಿಸುವಂತೆ ಮಾಡಿತ್ತು. ತಂದೆತಾಯಿ ನೀಡಿದ ಬೆಂಬಲ ಬಲುದೊಡ್ಡದು ಎಂದು ಪೂರ್ವಿ ಸಂತೋಷವನ್ನು ಹಂಚಿಕೊಂಡರು.
ಉಪನ್ಯಾಸಕರ ಮಾರ್ಗದರ್ಶನ ನಮ್ಮನ್ನು ಮುನ್ನಡೆಸಿದ ಬೆಳಕು. ಓದುವಾಗ ಸ್ವಲ್ಪ ಒತ್ತಡ ಎಂದು ಎನಿಸಿದರೂ ಈ ಕ್ಷಣದಲ್ಲಿ ನಿಂತು ಯೋಚಿಸುವಾಗ ಅಷ್ಟೊಂದು ತಾಳ್ಮೆಯಿಂದ ನಮಗೆ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ, ಮೌಲ್ಯಮಾಪನ ಮಾಡಿಕೊಟ್ಟು, ನಮ್ಮನ್ನು ತಿದ್ದಿದ ಉಪನ್ಯಾಸಕವೃಂದಕ್ಕೆ ನಾವು ಆಭಾರಿಗಳಾಗಿದ್ದೇವೆ. ಪ್ರಾಂಶುಪಾಲರಿಗೂ ಆಡಳಿತವೃಂದಕ್ಕೂ ನಮ್ಮ ಕೃತಜ್ಞತೆಗಳು ಎಂದು ಸಾಧಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸಿಹಿಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
