ಸಮ ಸಮಾಜದ ನಿರ್ಮಾಣಕ್ಕೆ ಅಂಬೇಡ್ಕರ್ ಚಿಂತನೆಗಳು ಇಂದಿಗೂ ಪ್ರಸ್ತುತ: ಎಲ್.ಎನ್. ಮುಕುಂದರಾಜ್
ಹೆಬ್ಬೂರು: “ಅಸಮಾನತೆಯ ಕೂಪವಾಗಿದ್ದ ಭಾರತದಲ್ಲಿ ಸಮಾನತೆಯ ಜ್ಯೋತಿ ಬೆಳಗಿದವರು ಡಾ. ಬಿ.ಆರ್. ಅಂಬೇಡ್ಕರ್. ಅವರ ಮಹೋನ್ನತ ಚಿಂತನೆಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥೈಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಬೇಕು,” ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ಕರೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಹೆಬ್ಬೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಚಕೋರ’ ಉಪನ್ಯಾಸ ಮಾಲಿಕೆ-೧೬ರ ಅಡಿಯಲ್ಲಿ ‘ಅಂಬೇಡ್ಕರ್ ಚಿಂತನೆಗಳ ಪ್ರಸ್ತುತತೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಲು ಈ ದೇಶದ ಸಂವಿಧಾನವೇ ಕಾರಣ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿರಂತರ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಉನ್ನತ ಸ್ಥಾನಮಾನಗಳನ್ನು ಪಡೆಯಲು ಈ ದೇಶದಲ್ಲಿ ಎಲ್ಲಾ ಅವಕಾಶಗಳಿವೆ ಎಂದು ಕಿವಿಮಾತು ಹೇಳಿದರು.
ಜನರ ಮನೆಬಾಗಿಲಿಗೆ ಸಾಹಿತ್ಯ ಅಕಾಡೆಮಿ:
ಸಾಹಿತ್ಯ ಅಕಾಡೆಮಿ ಸದಸ್ಯೆ ಸುಮಾ ಸತೀಶ್ ಮಾತನಾಡಿ, “ಅಕಾಡೆಮಿಯನ್ನು ಕೇವಲ ಪ್ರಶಸ್ತಿಗಳಿಗೆ ಸೀಮಿತಗೊಳಿಸದೆ, ಪ್ರಮುಖ ವಿಚಾರಗಳನ್ನು ಜನರ ಮನೆಮನಕ್ಕೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಅಂಬೇಡ್ಕರ್ ಅವರು ನೀಡಿದ ಕೊಡುಗೆ ಅನನ್ಯ,” ಎಂದರು.
ಸಮ ಸಮಾಜದ ಕನಸು:
ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ತುಮಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರೇಣುಕಾ ಪ್ರಸಾದ್ ಬಿ.ಆರ್. ಅವರು, “ಅಂಬೇಡ್ಕರ್ ಅವರ ವಿದ್ಯಾರ್ಥಿ ಜೀವನವೇ ನಮಗೆಲ್ಲ ದೊಡ್ಡ ಪ್ರೇರಣೆ. ಸಂವಿಧಾನದ ಮೂಲಕ ಅವರು ನಮಗೆ ಹಕ್ಕುಗಳನ್ನು ನೀಡಿದ್ದಾರೆ. ಇಂದಿಗೂ ಸಮಾಜದಲ್ಲಿ ಸಾಮಾಜಿಕ ನ್ಯಾಯ ಸಂಪೂರ್ಣವಾಗಿ ಸ್ಥಾಪನೆಯಾಗಿಲ್ಲ, ಹೀಗಾಗಿ ಸಮ ಸಮಾಜದ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಅತ್ಯಗತ್ಯ,” ಎಂದು ವಿಶ್ಲೇಷಿಸಿದರು.
ಚಕೋರ ವೇದಿಕೆಯ ಸಂಚಾಲಕ ಹಾಗೂ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು ಮಾತನಾಡಿ, “ಸರಿಯಾದ ಶಿಕ್ಷಣ ದೊರೆಯದಿದ್ದರೆ ಜೀವನ ಕಷ್ಟವಾಗುತ್ತದೆ ಮತ್ತು ನಾವು ಅವಕಾಶಗಳಿಂದ ವಂಚಿತರಾಗುತ್ತೇವೆ,” ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ. ಶಿವರಾಜು ವಹಿಸಿದ್ದರು. ವೇದಿಕೆಯಲ್ಲಿ ಪ್ರಮುಖರಾದ ಡಾ. ದಿನೇಶ್ ಕುಮಾರ್ ಸಿ., ಮಲ್ಲಿಕಾ ಬಸವರಾಜು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಗೋವಿಂದರಾಜು ಎನ್. ಅವರು ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕ ಮಧುಸೂದನ್ ಕೆ.ಪಿ. ಕಾರ್ಯಕ್ರಮ ನಿರೂಪಿಸಿದರು. ಡಾ. ರವೀಶ್, ಡಾ. ಮೋಹನ್ ಕುಮಾರ್ ಬಿ.ಎಸ್., ಜಗದೀಶ್ ಎಂ.ಎಸ್ ಸೇರಿದಂತೆ ಕಾಲೇಜಿನ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
