ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ವೃದ್ಧಿಗೆ ಖಾಸಗಿ ಕಂಪೆನಿ ಮುಂದೆ-ಶಾಸಕ ಸುರೇಶ್ ಗೌಡ
ನಾಗವಲ್ಲಿ ಕೆಪಿಎಸ್ ಶಾಲೆಗೆ ಮೂರು ಕೋಟಿ ರೂಪಾಯಿ ಅನುದಾನ ಕೊಡಲು ಟೊಯೊಟ ಕಂಪೆನಿ ಒಪ್ಪಿಗೆ
ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಾಗವಲ್ಲಿಯ ಕೆಪಿಎಸ್ ಶಾಲೆಗೆ ಗುರುವಾರ ಭೇಟಿ ನೀಡಿದ್ದ ಬೆಂಗಳೂರಿನ ಪ್ರತಿಷ್ಠಿತ ಟೊಯೊಟಾ ಕಿರ್ಲೊಸ್ಕರ್ ಕಂಪನಿಯ ಅಧಿಕಾರಿಗಳು ಶಾಲೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ಅಗತ್ಯವಾದ ಮೂರು ಕೋಟಿ ರೂಪಾಯಿ ಅನುದಾನವನ್ನು ಕೊಡಲು ಒಪ್ಪಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪೆನಿಯ ಅಧಿಕಾರಿಗಳಾದ ಜನರಲ್ ಮ್ಯಾನೇಜರ್ ಕಿರಣ್, ಮ್ಯಾನೇಜರ್ ಪ್ರಶಾಂತ್ ಹಾಗೂ ರಮೇಶ್ ಅವರು ತಮ್ಮ ಜತೆಗೆ ಕ್ಷೇತ್ರದ ಮಸ್ಕಲ್, ಹೊನ್ನುಡಿಕೆ ಹಾಗೂ ಹೊನಸಗೆರೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು. ಈಗಾಗಲೇ ಸರ್ಕಾರದ ಅನುದಾನ ಮತ್ತು ಶಾಸಕರ ನಿಧಿ ಸೇರಿ ಒಟ್ಟು 3.5 ಕೋಟಿ ರೂಪಾಯಿ ಅನುದಾನದಡಿ ಈ ಶಾಲೆಯಲ್ಲಿ 16 ಕೊಠಡಿಗಳ ನಿರ್ಮಾಣ ನಡೆದಿದೆ ಎಂದು ಶಾಸಕರು ತಿಳಿಸಿದ್ದಾರೆ.
ನಂತರ ನಾಗವಲ್ಲಿಯ ಕೆಪಿಎಸ್ ಶಾಲೆಗೆ ಭೇಟಿ ನೀಡಿ ಅಲ್ಲಿ ಸುಸಜ್ಜಿತವಾದ 12 ನೂತನ ಶಾಲಾ ಕೊಠಡಿಗಳು, ಕಂಪ್ಯೂಟರ್ಗಳು, ಪ್ರಯೋಗಾಲಯದ ಸಾಮಗ್ರಿಗಳು, ಗ್ರಂಥಾಲಯದ ಪುಸ್ತಕಗಳು, ಮತ್ತು ಶಿಕ್ಷಕರಿಗೆ ಲ್ಯಾಪ್ಟ್ಯಾಪ್, ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಆಟಿಗೆ ಸಾಮಾನುಗಳನ್ನು ಒದಗಿಸಲು ಮೂರು ಕೋಟಿ ರೂಪಾಯಿಗಳನ್ನು ಸಿಎಸ್ಆರ್ ನಿಧಿಯಡಿ ಒದಗಿಸಲು ಒಪ್ಪಿಕೊಂಡರು ಎಂದು ಅವರು ಹೇಳಿದ್ದಾರೆ.
ನಾಗವಲ್ಲಿ ಶಾಲೆಯನ್ನು ಇಡೀ ರಾಜ್ಯದಲ್ಲಿ ಒಂದು ಮಾದರಿ ಶಾಲೆಯನ್ನಾಗಿ ರೂಪಿಸಬೇಕು ಎನ್ನುವುದು ತಮ್ಮ ಕನಸು. ನನ್ನ ಕ್ಷೇತ್ರದ ಮಕ್ಕಳು ಜಗತ್ತಿನಲ್ಲಿ ಎಲ್ಲಿಯೇ ಹೋಗಲಿ ಅಲ್ಲಿ ತಲೆ ಎತ್ತಿ ಆತ್ಮಗೌರವದಿಂದ ನಿಲ್ಲಬೇಕು ಮತ್ತು ಯಾವುದೇ ಮಹತ್ವದ ಕೆಲಸ ಮಾಡಲು ತಾವು ಸಿದ್ಧ ಎಂಬುದನ್ನು ಸಾಬೀತು ಮಾಡಬೇಕು. ಆ ಬಗೆಯ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸುವುದು ತಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ ಇದೀಗ ಟೊಯೊಟ ಕಂಪೆನಿಯ ಉದಾರ ನೆರವಿನಿಂದ ಶಾಲೆಯು ಸಕಲ ಮೂಲ ಸೌಕರ್ಯಗಳನ್ನು ಹೊಂದುವುದು ಶತಃಸಿದ್ಧ. ಇದರಿಂದ ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿಸಬೇಕು ಮತ್ತು ಬಡವರ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಸಮಾನಾಂತರವಾದ ಸೌಕರ್ಯಗಳನ್ನು ಒದಗಿಸಬೇಕು ಎನ್ನುವ ತಮ್ಮ ಕನಸು ಈಡೇರುವ ಹಂತಕ್ಕೆ ತಲುಪಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನೆಲಸಿರುವ ವಿವಿಧ ಖಾಸಗಿ ಕಂಪೆನಿಗಳು ಹೀಗೆ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಮುಂದೆ ಬರುತ್ತಿರುವುದು ಅತ್ಯಂತ ಪ್ರಶಂಸಾರ್ಹ ಸಂಗತಿ. ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಫಿನ್ಲೆಂಡ್ನ ಇನ್ಕ್ಯಾಪ್ ಕಂಪೆನಿ, ಬೆಂಗಳೂರಿನ ಬಾಷ್ ಕಂಪೆನಿ, ಜಪಾನ್ನ ಟೀಮ್ಯಾಕ್ ಕಂಪೆನಿ, ಸಾಯಿ ಗಾರ್ಮೆಂಟ್ಸ್, ಕಾಪ್ರಾಡ್, ಟಿವಿಎಸ್ ಮತ್ತು ಜಿಂದಾಲ್ ಅಲ್ಯುಮಿನಿಯಂ ಕಂಪೆನಿಗಳು ಇದೇ ರೀತಿ ತಮ್ಮ ಸಿಎಸ್ಆರ್ ನಿಧಿಯಡಿ ನನ್ನ ಕ್ಷೇತ್ರದ ವಿವಿಧ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಉನ್ನತೀಕರಣಕ್ಕೆ ಸಹಾಯ ಮಾಡುತ್ತಿವೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಇಂದು ತಮ್ಮ ಕ್ಷೇತ್ರದ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಒದಗಿಸಲಾಗಿರುವ ಮೂಲಸೌಕರ್ಯಗಳ ಕುರಿತು ತೃಪ್ತಿ ವ್ಯಕ್ತಪಡಿಸಿದ ಟೊಯೊಟ ಕಂಪೆನಿಯ ಅಧಿಕಾರಿಗಳು ನಾಗವಲ್ಲಿ ಶಾಲೆಯನ್ನು ಇಡೀ ರಾಜ್ಯದಲ್ಲಿ ಒಂದು ಅತ್ಯುತ್ತಮ ಶಾಲೆ ಮಾಡುವ ತಮ್ಮ ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ತಾವು ಕೃತಜ್ಞತೆ ಸಲ್ಲಿಸುವುದಾಗಿ ಸುರೇಶ್ ಗೌಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
